ಗುರುವಾರ, ಫೆಬ್ರವರಿ 28, 2013

ಸೋಲು - ಗೆಲುವು



ಸಿಹಿಯು ರುಚಿಸಲು ನಾಲಿಗೆಯು ಕಹಿಯ ಸವಿದಿರಬೇಕು
ಸುಖದ ಅರಿವಾಗಲು ಜೀವನದ ಕಷ್ಟಗಳ ತಿಳಿದಿರಬೇಕು
ಬೆಳಕನು ಅರ್ಥೈಸಲು ಕತ್ತಲ ರಾತ್ರಿಯು ಕಳೆದಿರಬೇಕು
ಗೆಲುವನು ಸಂಭ್ರಮಿಸಲು ಸೋಲು ಹತ್ತಿರ ಸುಳಿದಿರಬೇಕು.

ಈಗಿನ ಸೋಲು ಆಗಲಿ ಮುಂದಿನ ಗೆಲುವಿಗೆ ಅಡಿಪಾಯ,
ಕುಗ್ಗದೆ ಮುನ್ನುಗ್ಗು, ಅರ್ಥಪೂರ್ಣ ಆಗ ದಕ್ಕುವ ಜಯ.

ಗುರುವಾರ, ಜನವರಿ 17, 2013

ಸೂತ್ರ



ಸಾವೆಂಬುದು ನಮಗೆ ನಿರೀಕ್ಷಿತ
ಸಾಯುವ ಬಗೆ ನೆಪ ಮಾತ್ರ.

ಬಾಳಿನ ಪ್ರತಿ ಘಳಿಗೆ ಅನಿರೀಕ್ಷಿತ
ಅದಕೆ ತಾಳ್ಮೆಯೇ ನಿಜ ಸೂತ್ರ!!!

ಶನಿವಾರ, ಜನವರಿ 12, 2013

ಹೊಸತು


ಹೊಸ ವರ್ಷದ ಹೊಸ ಕವನವಿದು

ಪದಗಳು ಹಳೆಯವು, ಆದರೆ ಹೊಸತು ಈ ಭಾವ
ಅದೇ ಜಡ ದೇಹ, ಒಳಗೆ ಚೈತನ್ಯ ತುಂಬಿದ ಜೀವ.

ಕಾಡುವ ನೆನಪುಗಳು, ಆದರೂ ಬರವಣಿಗೆಯ ನೆನೆದು ಪುಳಕ
ತೀಡುವ ಯೋಚನೆಗಳು, ಆದರೂ ನಿಲ್ಲದ ಬರೆಯುವ ತವಕ.

ಗುರುವಾರ, ಡಿಸೆಂಬರ್ 20, 2012

ಕಾಮಾಂಧರು



ಕಾಮ ತುಂಬಿದ ಕಣ್ಣುಗಳಿಗೆ ಬರೀ ಆಟಿಕೆಯಾದಳು ಮಾನಿನಿ
ಮರುಗುತ್ತಿರುವಳು, ಕಾಮಂಧರಿಗೆ ಜನ್ಮವಿತ್ತ ನತದೃಷ್ಟ ಜನನಿ.

ಅದಾವ ದುಶಕ್ತಿಯಿಂದ ಫಲಿಸಿತೋ ಅವರಿಗೆ ಕಾಮದ ಮತಿ
ಜನನಿಯೂ ಹೆಣ್ಣು ಎಂದು ಯೋಚಿಸಿದ್ದರೆ ನಡೆಯುತ್ತಿರಲಿಲ್ಲ ಈ ರೀತಿ.

ಹೆಣ್ಣಿನ ಮಾನಕ್ಕೆ ಬೆಲೆಕೊಡದ ದೂರ್ತರಿಗೆ ಒದಗಲಿ ಕಠಿಣ ಶಿಕ್ಷೆ
ಬದಲಾಗಬೇಕು ಇಂತವರ ಯೋಚನೆ, ಆಗಲೇ ಸಿಗುವುದು ಹೆಣ್ಣಿಗೆ ಶ್ರೀರಕ್ಷೆ

ಮಂಗಳವಾರ, ಡಿಸೆಂಬರ್ 04, 2012

ಪ್ರೀತಿಯ ಘಳಿಗೆಗಳು



ನಿನ್ನ ಒಲವೆಂಬುದು ದಿನದ ಘಳಿಗೆಗಳಂತೆ...
ನಿನ್ನ ಕಿರುನಗೆಯ ಹೊಂಗಿರಣಕೆ ಮನವು ಇಬ್ಬನಿಯಂತೆ ಕರಗಿ ಒಲವಿನ ಕುಸುಮವು ಚಿಗುರಿತು,
ನಡುಹೊತ್ತಿಗೆ ಕೋಪ, ಅಹಂಗಳ ಸುಡು ಬಿಸಿಲಿನ ಬೇಗೆಗೆ ಅರಳಿದ ಪ್ರೀತಿ ಹೂವು ಬಾಡಿತು,
ಸಂಜೆಯಾದೊಡನೆ ಎಲ್ಲವೂ ಶಾಂತ, ಪಡುವಣದ ಸೂರ್ಯನ ಜೊತೆಗೆ ಕಮರಿದ ಕನಸುಗಳು,
ಆವರಿಸಿತು ಕತ್ತಲು, ಆಯಿತು ಮನದ ಆಗಸವು ಬೆತ್ತಲು, ಅಲ್ಲಿ ಬರೀ ನೆನಪುಗಳ ಚುಕ್ಕಿಗಳು.

ಮಂಗಳವಾರ, ನವೆಂಬರ್ 13, 2012

ಬದುಕಿನ ಹಣತೆ




ಕತ್ತಲ ಆವರಣ ಇನ್ನೆಲ್ಲಿ ಮನೆಗಳಲಿ ಹಣತೆಗಳ ಹಚ್ಚಿರಲು,
ದುಷ್ಟ ಶಕ್ತಿಗಳ ಸುಳಿವೆಲ್ಲಿ ಮನಗಳಲಿ ವಿಶ್ವಾಸದ ಕಿಚ್ಚಿರಲು.

ಒಂದು ಕಿಡಿ ಬೆಂಕಿ ಸಾಕು ಕತ್ತಲೆಂಬ ರಕ್ಕಸನ ಕೊಲ್ಲಲು,
ಒಳ್ಳೆ ಜನರ ಸಂಗ ಬೇಕು ಬದುಕಿನ ಯುದ್ಧವ ಗೆಲ್ಲಲು.

ಕೈ ಕೈ ಹಿಡಿದು ಮನಗಳ ಬೆಸೆದು, ಹಣತೆಯನು ಹಚ್ಚುವ ಈ ಜಗದಿ
ಬೆಳಗಲಿ, ಅರದೆ ಉರಿಯಲಿ ಆ ಪ್ರೀತಿಯ ಬೆಳಕು ಯುಗ ಯುಗದಿ.

ಅಂಧಕಾರವ ಮನದಿಂದ ಬಡಿದೋಡಿಸಿ, ಒಳ್ಳೆಯದನ್ನು ಅಲ್ಲಿಗೆ ಬರಮಾಡಿಸಿ,
ಎಲ್ಲರಿಗೂ ಆರೈಕೆಗಳ ಬಡಿಸಿ, ತೆರೆದ ಮನದಿಂದ ದೀಪಾವಳಿಯ ಆಚರಿಸಿ.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :)

ಗುರುವಾರ, ನವೆಂಬರ್ 01, 2012

ಕನ್ನಡಾಂಬೆ



ಅರ್ಪಿಸಿದರು ನುಡಿ ಪುಷ್ಪಗಳ ಮಾಲೆಯನು ನಿನಗೆ,
ಆದರೆ ನನ್ನದು ನಿನ್ನ ಪಾದದಿ ಇರುವ ಹೂವಿನ ಎಸಳು.

ಬೆವರು ಸುರಿಸಿ, ನೆತ್ತರು ಹರಿಸಿದರು ಕನ್ನಡ ಗುಡಿಗೆ,
ಸದಾ ಹರಿದಾಡಲಿ ನಮ್ಮ ಮೇಲೆ ಆ ಕಲಿಗಳ ನೆರಳು.

ಎಲ್ಲೂ ಇರದ, ಬೇರೆಲ್ಲೂ ಸಿಗದ ಶಕ್ತಿ ಕನ್ನಡ ನುಡಿಗೆ,
ತೊಟ್ಟಿರುವಳು ಕನ್ನಡಾಂಬೆ ತನ್ನ ಮಕ್ಕಳ ಅಭಿಮಾನದ ಹರಳು.

ಸಮಸ್ತ ಕನ್ನಡ ಕುಲ ಕೋಟಿಗೆ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು :)