ಮಂಗಳವಾರ, ಮಾರ್ಚ್ 13, 2012

ಕಂಬದ ದೀಪ!!!



ನಾಲ್ಕು ರಸ್ತೆಗಳು ಕೂಡುವ ಆ ನಿಬಿಡ ಜಾಗದಿ
ಹಸಿರಿನಿಂದ ಕೆಂಪಿಗೆ ತಿರುಗಿದ ಕಂಬದ ದೀಪ.
ಅಲ್ಲಿಯವರೆಗು ಓಡುತಿದ್ದವು ಗಾಡಿಗಳೆಲ್ಲವು ಶರವೇಗದಿ,
ನಿಂತವು ಅವೆಲ್ಲವು, ಹಾಕಿದರೆಲ್ಲರೂ ಅದಾರಿಗೊ ಶಾಪ.

ಕಣ್ಣಿನಲ್ಲಿ ಬಿದ್ದ ಧೂಳನು ಒರೆಸಿ ನೋಡಲು,
ಅವನಿಗೆ ಕಂಡಿದ್ದು ತೆರೆದ ಒರಟು ಕೈಗಳು.
ಚಾಚಿದ ಆ ಕೈಗಳು ದುಡ್ಡನು ಬೇಡಲು,
ಕುಪಿತಗೊಂಡ ಅವನು ನೀಡಿದ್ದು ಬೈಗಳು.

ಮುಂದೆ ಸಾಗಿದವು ಆ ಕೈಗಳು ಮಗದೊಬ್ಬನನು ಬೇಡುತ,
ಅವನೋ, ಗೊಣಗಿದ "ಇದಕ್ಕಿಂತ ಸಾಯುವುದೇ ಲೇಸು"!!!
ಅದ ಕೇಳರಿಯದಂತೆ, ಎಲ್ಲರನು ಬೇಡುತ್ತ ಹೊರಟಿತು,
ಕೊನೆಗೂ ಆದಾವನೋ ಪುಣ್ಯಾತ್ಮ ಕೊಟ್ಟ ಪುಡಿಗಾಸು.

ಕೆಂಪು ಹಸಿರಾಗುವ ಸಮಯ ಅದಾಗಲೆ ಶುರುವಾಗಿತ್ತು,
ಮೆಲ್ಲನೆ ಮುಚ್ಚಿದ ಆ ಕೈಗಳು ಅಲ್ಲಿಂದ ಸರಿದಿತ್ತು,
ಮತ್ತೆ ಹಸಿರು ಕೆಂಪಾಗುವುದ ಕಾಯುತ್ತ, ಬದಲಾಗಬಾರದೇ ಕಂಬದ ದೀಪ ಎಂದು ಬೇಡುತ್ತ...

ಗುರುವಾರ, ಮಾರ್ಚ್ 08, 2012

ಹೋಳಿ


ತಾಯಿ ಮಗುವಿನ ಸಂಭಾಷಣೆ:
ಮಗು : ಅಮ್ಮ,ಅಮ್ಮ ಹೋಳಿ ಅಂದರೇನು?
ಒಬ್ಬರಿಗೊಬ್ಬರು ಬಣ್ಣ ಹಚ್ಚುವುದೇನು???
ಅಮ್ಮ : ಹೌದು ಕಂದ ನನ್ನ ಮುಕುಂದ,
       ಅದುವೇ ಈ ಹಬ್ಬದ ಚೆಂದ!!!
ಮಗು: ಹಾಗಾದರೆ ನಾನೀಗಲೆ ಬಣ್ಣ ತರಲೇನು?
ಅಮ್ಮ : ತಂದದ್ದಾಯಿತು ನಿನಗೆ ಕೊಂಚ ಹಚ್ಚಲೇನು...

ಸ್ನೇಹಿತರಿಬ್ಬರ ಸಂಭಾಷಣೆ:
ಅವನೆಂದ : ಇಂದು ಬೇಸರವಾಗಿದೆ ನನ್ನ ಮನಕೆ,
            ಏಕೆಂದರೆ, ನನ್ನ ಬಳಿ ಇಲ್ಲ ನನ್ನಾಕೆ.
ಇವನೆಂದ : ಗೆಳೆಯ, ಇಂದು ಬಿಡು ನಿನ್ನ ಚಿಂತೆ,
ಎಲ್ಲರೂ ಬಣ್ಣ ಹಚ್ಚೋಣ,ಇಂದು ಹೋಳಿಯಂತೆ.
ಅವನೆಂದ : ಆದದ್ದಾಯಿತು... ನಡಿ ಹಬ್ಬವ ಆಚರಿಸೋಣ.
ಇವನೆಂದ : ಬಣ್ಣವ ತಂದಿರುವೆ, ನಿನ್ನಿಂದಲೆ ಶುರು ಮಾಡೋಣ!!!

ಪೇಮಿಗಳ ನಡುವಿನ ಸಂಭಾಷಣೆ:
ಅವಳು : ಭಯವಾಗುತಿದೆ ಮುಂದೇನಾಗುವುದು ಎಂದು,
ಒಪ್ಪುತ್ತಿಲ್ಲ ಅಪ್ಪ, ಅಮ್ಮ ನಮ್ಮೆಲ್ಲಾ ಬಂಧು.
ಇವನು: ಸದಾ ಜೊತೆಗಿರುವೆ, ಎಲ್ಲಿಯೂ ಹೋಗೊಲ್ಲ ನಿನ್ನ ಬಿಟ್ಟು,
ಇಂದು ಬಣ್ಣದ ಆಟವ ಆಡೋಣ ಎಲ್ಲಾ ಚಿಂತೆಗಳು ಬದಿಗಿಟ್ಟು.
ಅವಳು : ನೀನಿರಲು ಭಯವಿಲ್ಲ, ಬಣ್ಣಗಳಿಂದ ದುಃಖವ ಮರೆಮಾಚು,
ಇವನು : ಬಣ್ಣವ ಎರಚಿ ಸಂಭ್ರಮಿಸೋಣ, ಒಮ್ಮೆ ನಿನ್ನ ಕೈ ಚಾಚು!!!

ಅಮ್ಮನು ಹಚ್ಚಿದ್ದು ವಾತ್ಸಲ್ಯದ ಬಣ್ಣ,
ಸ್ನೇಹಿತರು ಹಚ್ಚಿದ್ದು ವಿಶ್ವಾಸದ ಬಣ್ಣ,
ಪ್ರೇಮಿಯು ಹಚ್ಚಿದ್ದು ಪ್ರೀತಿಯ ಬಣ್ಣ,
ಈ ಜೀವನವು ಹಚ್ಚಿದ್ದು ಕಲಿಕೆಯ ಬಣ್ಣ!!!

ಹೋಳಿ ಹಬ್ಬದ ಶುಭಾಶಯಗಳು :)

ಸೋಮವಾರ, ಮಾರ್ಚ್ 05, 2012

ಕಂಡ ಕನಸುಗಳು!!!




ರಾತ್ರಿ ಕಂಡ ಕನಸುಗಳೆಲ್ಲಾ, ಇನ್ನೂ ತೆರೆಯದ ಕಂಗಳೊಳಗೆ ಅವಿತಿದ್ದವು,
ಮುಚ್ಚಿದ ಕಂಗಳಿಗೆ ಕಾವು ನೀಡುವ ನಿನ್ನ ನೆನಪುಗಳು ನನ್ನ ಬಳಿಯಿದ್ದವು,
ತನುವು ಆಗ ಹಗುರಾಗಿ, ಮನವು ತೇಲಿ ನವಿರಾಗಿ ಕಣ್ಣ ರೆಪ್ಪೆಗಳು ತೆರೆದವು,
ತೆರೆದ ಕಂಗಳಲಿ ಜಗವ ನೋಡಲು ಕಂಡ ಕನಸುಗಳೆಲ್ಲಾ ನನಸಾದವು!!!

ಗುರುವಾರ, ಮಾರ್ಚ್ 01, 2012

ದಾರಿಯ ಮರೆತವ!!!



ಬೆಂಬತ್ತಿದೆ ಒಲವಿನ ಮಾಯಾಜಿಂಕೆಯ, ಚೆಲುವೆ ನಾ ನಿನ್ನ ನಲ್ಲ,
ನಾ ರಾಮನಲ್ಲ, ಆದರೂ ಹೂಡಿದೆ ಕಣ್ಣೋಟದ ಬಾಣವ.

ನಿನ್ನನರಸಿ ದಣಿವಾಯಿತು ದೇಹಕೆ ಆದರೆ ನನ್ನೀ ಮನಸಿಗಲ್ಲ,
ನಿನ್ನೊಲವಿಗೆ ಹಂಬಲಿಸಿದೆ, ಬಿಡಲಿಲ್ಲ ಪಡೆಯಬೇಕೆಂಬ ಛಲವ.

ಅದೆಷ್ಟೇ ಬಾಣಗಳ ಹೂಡಿದರೂ ನೀ ಅವಕ್ಕೆ ಸಿಗಲಿಲ್ಲ,
ಇಲ್ಲಿಂದ ಹಿಂದಿರುಗಿ ಹೋಗೆನು, ನಾ ದಾರಿಯ ಮರೆತವ!!!